ಮಹಾರಾಜ ಕರ್ಣಿ ಸಿಂಗ್(೨೧ ಏಪ್ರಿಲ್ ೧೯೨೪ - ೬ ಸೆಪ್ಟೆಂಬರ್ ೧೯೮೮) ಅವರನ್ನು ಡಾ. ಕರ್ಣಿ ಸಿಂಗ್ ಎಂದೂ ಕರೆಯುತ್ತಾರೆ. ಅವರು ೧೯೫೦ ರಿಂದ ಬಿಕಾನೇರ್ ರಾಜ್ಯದ ಕೊನೆಯ ಮಹಾರಾಜರಾಗಿದ್ದರು. ಅಧಿಕೃತವಾಗಿ ೧೯೭೧ ರವರೆಗೆ- ಭಾರತ ಗಣರಾಜ್ಯವು ಪ್ರಿವಿ ಪರ್ಸ್ ಮತ್ತು ಎಲ್ಲಾ ರಾಜ ಪದವಿಗಳನ್ನು ರದ್ದುಗೊಳಿಸುವವರೆಗೆ. ಅವರು ರಾಜಕಾರಣಿಯೂ ಆಗಿದ್ದರು. ೧೯೫೨ ರಿಂದ ೧೯೭೭ ರವರೆಗೆ ಇಪ್ಪತ್ತೈದು ವರ್ಷಗಳ ಕಾಲ ಲೋಕಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು ಮತ್ತು ಅಂತರರಾಷ್ಟ್ರೀಯ ಕ್ಲೇ ಪಿಜನ್ ಶೂಟಿಂಗ್(ಜೇಡಿಮಣ್ಣಿನ ಪಾರಿವಾಳ ಶೂಟಿಂಗ್) ಮತ್ತು ಸ್ಕೀಟ್ ಚಾಂಪಿಯನ್ ಆಗಿದ್ದರು. == ಆರಂಭಿಕ ಜೀವನ ಮತ್ತು ಶಿಕ್ಷಣ == ರಾಜಕುಮಾರ ಕರ್ಣಿ ಸಿಂಗ್ ಆಗಿ ೨೧ ಏಪ್ರಿಲ್ ೧೯೨೪ ರಂದು ಬಿಕಾನೇರ್ ರಾಜಪ್ರಭುತ್ವದಲ್ಲಿ ಜನಿಸಿದ ಸಿಂಗ್ ಅವರ ಮೊದಲ ಶಾಲಾ ಶಿಕ್ಷಣವು ಅಲ್ಲಿಯೇ ಇತ್ತು. ನಂತರ ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಬಾಂಬೆಯ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಅಲ್ಲಿ ಅವರು ಇತಿಹಾಸ ಮತ್ತು ರಾಜಕೀಯದಲ್ಲಿ ಗೌರವಗಳೊಂದಿಗೆ ಬಿ.ಎ. ಪದವಿ ಪಡೆದರು. == ವೃತ್ತಿ == ಅವರು ಎರಡನೇ ಮಹಾಯುದ್ಧದಲ್ಲಿ, ಬಿಕಾನೇರ್ ನ ೨೩ ನೇ ಮಹಾರಾಜರಾದ ತಮ್ಮ ಅಜ್ಜ ಜನರಲ್ ಸರ್ ಗಂಗಾ ಸಿಂಗ್ ಅವರೊಂದಿಗೆ ಮಧ್ಯಪ್ರಾಚ್ಯದಲ್ಲಿ ಸಕ್ರಿಯ ಸೇವೆಯನ್ನು ಸಲ್ಲಿಸಿದರು. ೧೯೫೦ ರಲ್ಲಿ ರಾಜಕುಮಾರ ಕರ್ಣಿ ತನ್ನ ತಂದೆ ಲೆಫ್ಟಿನೆಂಟ್ ಜನರಲ್ ಮಹಾರಾಜ ಸರ್ ಸಾದುಲ್ ಸಿಂಗ್ ಅವರ ಉತ್ತರಾಧಿಕಾರಿಯಾದರು. ೧೯೫೨ ರಲ್ಲಿ, ಯುವ ಮಹಾರಾಜ ಕರ್ಣಿ ಸಿಂಗ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಬಿಕಾನೇರ್ ಕ್ಷೇತ್ರದಿಂದ ಭಾರತದ ಲೋಕಸಭೆಯ(ಕೆಳಮನೆ) ಸಂಸದರಾಗಿ ಆಯ್ಕೆಯಾದರು. ವಿವಿಧ ಸಚಿವಾಲಯಗಳ ಹಲವಾರು ಸಲಹಾ ಸಮಿತಿಗಳಲ್ಲಿ ಸೇವೆ ಸಲ್ಲಿಸಿದರು ಮತ್ತು ೧೯೭೭ ರವರೆಗೆ ತಮ್ಮ ಸ್ಥಾನವನ್ನು ಹೊಂದಿದ್ದರು. ೧೯೬೪ ರಲ್ಲಿ ಅವರು ಕೇಂದ್ರ ಅಧಿಕಾರದೊಂದಿಗೆ ಬಿಕಾನೇರ್ ರಾಜಮನೆತನದ ಸಂಬಂಧ (೧೪೬೫- ೧೯೪೯) ಎಂಬ ಪ್ರಬಂಧಕ್ಕಾಗಿ ಬಾಂಬೆ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪಡೆದರು. ಅವರು ರಾಜಸ್ಥಾನಿ ಭಾಷೆಯ ಕಟ್ಟಾ ಬೆಂಬಲಿಗರಾಗಿದ್ದರು ಮತ್ತು ಅದನ್ನು ಭಾರತೀಯ ಸಂವಿಧಾನದ ೧೪ ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ವಾದಿಸಿದರು. ಅನೇಕ ಕ್ರೀಡೆಗಳ ಜೊತೆಗೆ, ಅವರ ಆಸಕ್ತಿಗಳಲ್ಲಿ ಛಾಯಾಗ್ರಹಣ ಮತ್ತು ಚಿತ್ರಕಲೆ ಸೇರಿವೆ. ಮಹಾರಾಜ ಕರ್ಣಿ ಸಿಂಗ್‌ರವರು ೧೯೮೦ ರಲ್ಲಿ ತಮ್ಮ ಕೊನೆಯ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು ಮತ್ತು ಅವರು ಸೆಪ್ಟೆಂಬರ್ ೪, ೧೯೮೮ ರಂದು ನಿಧನರಾದರು. == ಕುಟುಂಬ == ಅವರು ಮಹಾರಾಜ ಸಾದುಲ್ ಸಿಂಗ್ ಅವರ ಹಿರಿಯ ಪುತ್ರರಾಗಿದ್ದರು ಮತ್ತು ಅವರ (ಕುಲ ದೇವಿ) ದೇವತೆಯ ಹೆಸರು ಕರ್ಣಿ ಮಾತಾ ನಂತರ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ. ಸಿಂಗ್ ಅವರು ೨೫ ಫೆಬ್ರವರಿ ೧೯೪೪ ರಂದು ಡುಂಗರ್‌ಪುರದ ರಾಜಕುಮಾರಿ ಸುಶೀಲಾ ಕುಮಾರಿ ಅವರನ್ನು ವಿವಾಹವಾದರು ಮತ್ತು ಅವರಿಗೆ ನರೇಂದ್ರ ಸಿಂಗ್ ಎಂಬ ಒಬ್ಬ ಮಗ ಮತ್ತು ರಾಜ್ಯಶ್ರೀ ಕುಮಾರಿ ಮತ್ತು ಮಧುಲಿಕಾ ಕುಮಾರಿ ಎಂಬ ಇಬ್ಬರು ಪುತ್ರಿಯರಿದ್ದರು. ಅವರ ಮಗಳು ರಾಜಕುಮಾರಿ ರಾಜ್ಯಶ್ರೀ ಕುಮಾರಿ ಕೂಡ ಪ್ರಥಮ ದರ್ಜೆ ಶೂಟಿಂಗ್ ಕ್ರೀಡಾಪಟುವಾಗಿದ್ದು, ೧೯೬೮ ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದರು. ಅವರ ನಂತರ ಅವರ ಮಗ ನರೇಂದ್ರ ಸಿಂಗ್ ಅಧಿಕಾರಕ್ಕೆ ಬಂದರು. ಅವರಿಗೆ ದಕ್ಷ ಕುಮಾರಿ, ಸಿದ್ಧಿ ಕುಮಾರಿ ಮತ್ತು ಮಹಿಮಾ ಕುಮಾರಿ ಎಂಬ ಮೂವರು ಹೆಣ್ಣುಮಕ್ಕಳಿದ್ದಾರೆ. ರಾಜಕುಮಾರಿ ಸಿದ್ಧಿ ಕುಮಾರಿ ಇಂದಿನ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ(ಪ್ರಸ್ತುತ ಬಿಕಾನೇರ್ ಪೂರ್ವ(ರಾಜಸ್ಥಾನ) ಶಾಸಕಿಯಾಗಿದ್ದಾರೆ). == ಕ್ರೀಡಾ ವೃತ್ತಿ == ಸಿಂಗ್ ಅವರು ಹದಿನೇಳು ಬಾರಿ ಕ್ಲೇ ಪಿಜನ್ ಟ್ರ್ಯಾಪ್(ಜೇಡಿಮಣ್ಣಿನ ಪಾರಿವಾಳಗಳ ಶೂಟಿಂಗ್) ಮತ್ತು ಸ್ಕೀಟ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದರು ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಯ ಎಲ್ಲಾ ಹಂತಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ೧೯೬೦ ರಿಂದ ೧೯೮೦ ರವರೆಗೆ ಐದು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯರಾಗಿದ್ದಾರೆ. ರೋಮ್(೧೯೬೦), ಟೋಕಿಯೊ(೧೯೬೪)ನಾಯಕ),ಮೆಕ್ಸಿಕೊ(೧೯೬೮), ಮ್ಯೂನಿಕ್(೧೯೭೨) ಮತ್ತು ಮಾಸ್ಕೋ(೧೯೮೦)ದಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್ನಲ್ಲಿ ಜೇಡಿಮಣ್ಣಿನ ಪಾರಿವಾಳ ಶೂಟಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಸ್ಪರ್ಧೆಯಲ್ಲಿ ಅವರ ಅತ್ಯುತ್ತಮ ಸ್ಥಾನಗಳು ೧೯೬೦ ರಲ್ಲಿ ಎಂಟನೇ ಮತ್ತು ೧೯೬೮ ರಲ್ಲಿ ಹತ್ತನೆಯದಾಗಿತ್ತು. ಅವರು ೧೯೬೧ ರಲ್ಲಿ ಓಸ್ಲೋದಲ್ಲಿ ನಡೆದ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದರು. ಮುಂದಿನ ವರ್ಷ ಕೈರೋದಲ್ಲಿ ನಡೆದ ೩೮ ನೇ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಅವರು ೧೯೬೬ ರಲ್ಲಿ ವೈಸ್ಬಾಡೆನ್ನಲ್ಲಿ ನಡೆದ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿದರು ಮತ್ತು ತಂಡವನ್ನು ಮುನ್ನಡೆಸಿದರು. ಇವರು ೧೯೬೭ ರಲ್ಲಿ ಬೊಲೊಗ್ನಾ ಮತ್ತು ೧೯೬೯ ರಲ್ಲಿ ಸ್ಯಾನ್ ಸೆಬಾಸ್ಟಿಯನ್ನಲ್ಲಿ ಸ್ಪರ್ಧಿಸಿದರು. ಅವರು ೧೯೬೭ ರಲ್ಲಿ ಟೋಕಿಯೊದಲ್ಲಿ ಮತ್ತು ೧೯೭೧ ರಲ್ಲಿ ಸಿಯೋಲ್ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದರು. ಅವರು ೧೯೭೪ ರಲ್ಲಿ ಟೆಹ್ರಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು ಮತ್ತು ೧೯೭೫ ರಲ್ಲಿ ಕೌಲಾಲಂಪುರದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಮತ್ತೊಂದು ಪದಕವನ್ನು ಗೆದ್ದರು. ೧೯೮೧ ರಲ್ಲಿ ಅವರು ಜೇಡಿಮಣ್ಣಿನ ಪಾರಿವಾಳ ಶೂಟಿಂಗ್‌ಗಾಗಿ, ವೆಲ್ಷ್ ಗ್ರ್ಯಾಂಡ್ ಪ್ರಿಕ್ಸ್, ನಾರ್ತ್ ವೇಲ್ಸ್ ಕಪ್ ಮತ್ತು ನಾರ್ತ್ ವೆಸ್ಟ್ ಆಫ್ ಇಂಗ್ಲೆಂಡ್ ಕಪ್ ಗೆದ್ದರು. ೧೯೬೧ ರಲ್ಲಿ ಅವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು ಮತ್ತು ಶೂಟಿಂಗ್ ಜಗತ್ತಿನಲ್ಲಿ ಆ ರಾಷ್ಟ್ರೀಯ ಗೌರವವನ್ನು ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ತಮ್ಮ ಶೂಟಿಂಗ್ ಅನುಭವಗಳನ್ನು ರೋಮ್‌ನಿಂದ ಮಾಸ್ಕೋ ಎಂಬ ಆತ್ಮಚರಿತ್ರೆಯ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸಿಂಗ್ ಅವರು ಟೆನ್ನಿಸ್, ಗಾಲ್ಫ್ ಮತ್ತು ಕ್ರಿಕೆಟ್‌ನಲ್ಲಿ ಉತ್ಸುಕ ಆಟಗಾರರಾಗಿದ್ದರು ಮತ್ತು ಖಾಸಗಿ ಪೈಲಟ್ ಪರವಾನಗಿಯನ್ನು ಹೊಂದಿದ್ದರು. == ಸದಸ್ಯತ್ವಗಳು == ಸಿಂಗ್ ಅವರು ಏಷ್ಯಾಟಿಕ್ ಸೊಸೈಟಿ ಆಫ್ ಇಂಡಿಯಾ, ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ, ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ, ವೆಸ್ಟರ್ನ್ ಇಂಡಿಯಾ ಆಟೋಮೊಬೈಲ್ ಅಸೋಸಿಯೇಷನ್, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ, ಬಾಂಬೆ ಫ್ಲೈಯಿಂಗ್ ಕ್ಲಬ್, ಬಾಂಬೆ ಪ್ರೆಸಿಡೆನ್ಸಿ ಗಾಲ್ಫ್ ಕ್ಲಬ್, ದೆಹಲಿ ಗಾಲ್ಫ್ ಕ್ಲಬ್, ಕ್ಲೇ ಪಿಜನ್ ಶೂಟಿಂಗ್ ಅಸೋಸಿಯೇಷನ್ (ಇದರಲ್ಲಿ ಅವರು ಗೌರವಾನ್ವಿತ ಆಜೀವ ಉಪಾಧ್ಯಕ್ಷರಾಗಿದ್ದರು), ವಿಲಿಂಗ್ಡನ್ ಸ್ಪೋರ್ಟ್ಸ್ ಕ್ಲಬ್ ಮತ್ತು ರಾಯಲ್ ವಿಂಬಲ್ಡನ್ ಗಾಲ್ಫ್ ಕ್ಲಬ್‌ಗಳ ಸದಸ್ಯರಾಗಿದ್ದರು. == ಪರಂಪರೆ == ದೆಹಲಿಯ ಐತಿಹಾಸಿಕ ತುಘಲಕಾಬಾದ್ ಕೋಟೆಯ ಬಳಿ ಇರುವ ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್ ಗೆ ಅವರ ಹೆಸರನ್ನು ಇಡಲಾಗಿದೆ. ಇದನ್ನು ಮೊದಲು ನವದೆಹಲಿಯಲ್ಲಿ ನಡೆದ ೧೯೮೨ ರ ಏಷ್ಯನ್ ಕ್ರೀಡಾಕೂಟಕ್ಕಾಗಿ ನಿರ್ಮಿಸಲಾಯಿತು ಮತ್ತು ನಂತರ ೨೦೧೦ ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕಾಗಿ ಮರುನಿರ್ಮಾಣ ಮಾಡಲಾಯಿತು. == ಉಲ್ಲೇಖಗಳು ==